ಕಡಬ ಟೈಮ್ಸ್ (KADABA TIMES):ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಂಸ್ಕಾರಯುತ ಶಿಕ್ಷಣ ದೊರೆತಲ್ಲಿ ಮುಂದೆ ಯುವಜನತೆ ಯಶಸ್ಸಿನ ದಾರಿಯಲ್ಲಿ ಸಾಗಲು ಶಿಕ್ಷಣ ಸಂಸ್ಥೆಗಳು ಕಾರಣಕರ್ತವಾಗಿವೆ ಎಂದು ತಾ.ಪಂ. ಸದಸ್ಯ ಗಣೇಶ್ ಕೈಕುರೆ ಹೇಳಿದರು.
ಅವರು ಬುಧವಾರ ನೂಜಿಬಾಳ್ತಿಲ ಗ್ರಾಮದ ಅಡೆಂಜ ಸರಕಾರಿ ಕಿ.ಪ್ರಾ. ಶಾಲೆಯಲ್ಲಿ 6ನೇ ತರಗತಿ ಉದ್ಘಾಟನಾ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಗಳು ನಮ್ಮ ಹತ್ತಿರದಲ್ಲೇ ಇದ್ದಲ್ಲಿ ಸುಲಭವಾಗಿ ಶಿಕ್ಷಣ ಪಡೆಯಬಹುದು ಎಂದ ಅವರು ಅಡೆಂಜ ಶಾಲೆ ಮುಂದಕ್ಕೆ ಉನ್ನತ ಶಾಲೆಯಾಗಿ ಮೇಲ್ದರ್ಜೆಗೇರಲಿ ಎಂದರು.
ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿ, ಜಿಲ್ಲಾಧಿಕಾರಿಗಳ ಮಳೆಹಾನಿ ಯೋಜನೆಯಡಿ ಈ ಭಾಗದ ಹೆಚ್ಚಿನ ಶಾಲೆಗಳಿಗೆ ಅನುದಾನ ಬರುವಲ್ಲಿ ಸಹಕರಿಸಲಾಗಿದೆ. ಅಡೆಂಜ ಶಾಲೆಗೂ ಮಂಜೂರಾದ ಎರಡು ಲಕ್ಷ ಅನುದಾನದಲ್ಲಿ ಶಾಲಾ ಮೇಲ್ಚಾವಣಿ ದುರಸ್ತಿ ಮಾಡಲಾಗಿದೆ ಎಂದರು.
ನೂಜಿಬಾಳ್ತಿಲ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ನೂಜಿಬಾಳ್ತಿಲ ಕ್ಲಸ್ಟರ್ ಸಿ.ಆರ್.ಪಿ. ಗೋವಿಂದ ನಾಯಕ್ 6ನೇ ತರಗತಿ ಹಾಗೂ ಕೊಠಡಿ ಉದ್ಘಾಟಿಸಿದರು. ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ ರಾಧಾಕೃಷ್ಣ ಕೆರ್ನಡ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷೆ ರಾಜೇಶ್ವರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಎಲಿಯಮ್ಮ, ಸಹಶಿಕ್ಷಕ ರವಿಕುಮಾರ್ ಸಹಕರಿಸಿದರು.


