ಕಡಬ ಟೈಮ್ಸ್, ಕೊಯಿಲ: ಕೈಯಲ್ಲಿ ಲಾಟಿ ಹಿಡಿದು ಜನರು ಕಾನೂನು ಪಾಲನೆ ಮಾಡುವಲ್ಲಿ ತಪ್ಪಿದರೆ ಎಚ್ಚರಿಸುವ ಕಾರ್ಯ ಮಾಡುವ ಪೋಲೀಸರು ರಸ್ತೆ ದುರಸ್ತಿಯಂತಹ ಕಾರ್ಯಗಳಿಗೆ ನೇತೃತ್ವ ನೀಡಿ ಜನಸ್ನೇಹಿಯಾಗಿ ಕೆಲಸ ಮಾಡಬಹುದು ಎಂದು ಕಡಬ ಠಾಣಾ ಹೆಡ್ಕಾನಸ್ಟೇಬಲ್ ಕೊಯಿಲ ಗ್ರಾಮದ ಬೀಟ್ ಪೋಲೀಸ್ ಹರೀಶ್ ಅವರು ಮಾಡಿ ತೋರಿಸಿದ್ದಾರೆ.
ಕೊಯಿಲ ಗ್ರಾಮದ ವಳಕಡಮ ಭಾಗದ ಕೆಲವು ರಸ್ತೆಗಳು ಹದಗೆಟ್ಟು ಕೆಸರು ತುಂಬಿ ಸಂಚಾರಕ್ಕೆ ಸಂಚಿಕಾರ ಉಂಟು ಮಾಡುತ್ತಿರುವುದನ್ನು ಮನಗಂಡ ಹರೀಶ್ ಅವರು ಈ ಭಾಗದ ಪಂಚಾಯಿತಿ ಸದಸ್ಯರು, ಹಿರಿಯ ನಾಗರೀಕರು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗದುಕೊಂಡು ಮಂಗಳವಾರ ದುರಸ್ತಿ ಕಾರ್ಯ ಮಾಡಿ ಮುಗಿಸಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಗ್ರಾಮದ ಬರಮೇಲು- ವಳಕಡಮ, ವಳಕಡಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಹಾಲಿನ ಸೊಸೈಟಿ ರಸ್ತೆಯ ಬೀಜತ್ತಳಿಕೆ ಹಾಗೂ ಕೆರೆಕೋಡಿ ಮುಂತಾದ ಸ್ಥಳಲ್ಲಿ ತೀರಾ ಹದಗೆಟ್ಟ ರಸ್ತೆಗೆ ಗ್ರಾಮಸ್ಥರ ನೆರವಿನೊಂದಿಗೆ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಕೆಸರು ತೆರವು ಮಾಡಿ ಚರಳು ಹೊಯಿಗೆ ಹಾಸಿ ದುಸ್ತಿ ಮಾಡಲಾಯಿತು. ಸ್ಥಳೀಯ ಪ್ರತಿನಿಧಿಗಳು ಬೀಟ್ ಪೋಲೀಸ್ಗೆ ಸಾಥ್ ನೀಡಿದ್ದಾರೆ.ಉದ್ಯಮಿಗಳು ಎರಡು ಲಾರಿ ,ಒಂದು ಪಿಕ್ಅಪ್ ಉಚಿತವಾಗಿ ಸಾಗಾಟಕ್ಕೆ ವಾಹನವನ್ನು ನೀಡಿ ಸಹಕರಿಸಿದ್ದಾರೆ.
ಗ್ರಾಮದ ಅಭಿವೃದ್ದಿಗೆ ಕೈ ಜೋಡಿಸಿದ ಬೀಟ್ ಪೊಲೀಸ್: ಹರೀಶ್ ಅವರು ಕೊಯಿಲ ಗ್ರಾಮದ ಬೀಟ್ ಜವಾಬ್ದಾರಿ ವಹಿಸಿಕೊಂಡ ಬಳಿಕ ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇಲ್ಲಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಈ ಹಿಂದೆ ಪುತ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಶಾಂತಿಗೋಡು ಗ್ರಾಮದ ಬೀಟ್ ಪೋಲೀಸ್ ಆಗಿ ಅಲ್ಲಿ ಬೀದಿ ದೀಪ, ಚರಂಡಿ, ರಸ್ತೆ ದುರಸ್ತಿ ಮುಂತಾದ ಜನಸ್ನೇಹಿ ಕೆಲಸಗಳನ್ನು ಮಾಡಿ ಮಾದರಿ ಕರ್ತವ್ಯ ನಿರ್ವಹಿಸಿ ಇಲಾಖೆಯ ಉನ್ನತ ಅಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಇವರು ಅಲ್ಲಿಂದ ವರ್ಗಾವಣೆಗೊಂಡಾಗ ಊರವರು ಪ್ರೀತಿಯಿಂದ ಗೌರವಿಸಿ ಸನ್ಮಾನಿಸಿ ಬೀಳ್ಕೊಟ್ಟಿದ್ದರು. ಇದೀಗ ಕೊಯಿಲ ಗ್ರಾಮದಲ್ಲಿ ಕೂಡಾ ಉತ್ತಮ ಕಾರ್ಯಗಳನ್ನು ಮಾಡುತ್ತಾ ಜನರ ಸಮಸ್ಯೆಗೆ ಸ್ಪಂದಿಸುತ್ತಿರುವುದು ಉತ್ತಮ ಬೆಳವಣಿಗೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


