ಕಡಬ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಡಬ ತಾಲೂಕು ಘಟಕ ರಚನೆಯಾಗಿದ್ದು,.ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಪಡ್ಡಿಲ್ಲಾಯ , ಅಧ್ಯಕ್ಷರಾಗಿ ದಯಾನಂದ ರೈ ಮನವಳಿಕೆಗುತ್ತು, ಪ್ರಧಾನ ಸಂಚಾಲಕರಾಗಿ ಡಾ| ಹೇಮಂತ್ ರೈ ಮನವಳಿಕೆಗುತ್ತು ಆಯ್ಕೆಯಾಗಿದ್ದಾರೆ.
ಸೆ.5ರಂದು ಆಲಂಕಾರಿನ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಪಟ್ಲ ಫೌಂಡೇಶನ್ ನ ಅಭಿಮಾನಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಎಸ್ ವಿ ಪ್ರಸಾದ್ ಕಣಿಪುರ , ಜತೆ ಕಾರ್ಯದರ್ಶಿಯಾಗಿ ಜನಾರ್ಧನ ಗೌಡ ಕಯ್ಯಪೆ,ಕೋಶಾಧಿಕಾರಿಯಾಗಿ ಶ್ರೀಮತಿ ಮಮತಾ ಅಂಬರಾಜೆ,ಉಪಾಧ್ಯಕ್ಷರಾಗಿ ವಿಠಲ್ ರೈ ಕೊಣಾಲುಗುತ್ತು , ಶ್ರೀಮತಿ ಬೇಬಿ ಪಾಟಾಲಿ, ಗೌರವ ಸಲಹೆಗಾರರಾಗಿ ಸುಬ್ರಹ್ಮಣ್ಯ ರಾವ್ ನಗ್ರಿ, ರಮೇಶ್ ಭಟ್ ಉಪ್ಪಂಗಳ, ಈಶ್ವರ ಗೌಡ ಪಜ್ಜಡ್ಕ, ರಾಧಾಕೃಷ್ಣ ರೈ ಪರಾರಿಗುತ್ತು, ಕೆ ಗೋಪಾಲ ಕಡಬ, ಮುತ್ತಪ್ಪ ಪೂಜಾರಿ ನೆಯ್ಯಲ್ಗ ಆಯ್ಕೆಯಾಗಿದ್ದಾರೆ.
ಕಡಬ ತಾಲೂಕು ಘಟಕದ ಪದಗ್ರಹಣ: ನವರಾತ್ರಿಯ ಸುಸಂದರ್ಭದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ಕಡಬ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಟ್ಲ ಸತೀಶ್ ಶೆಟ್ಟಿಯವರ ಹಾಗೂ ಕೇಂದ್ರ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ.
ಪಟ್ಲ ಫೌಂಡೇಶನ್ ವಿಶೇಷತೆ: ಕರಾವಳಿಯ ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಸಂಸ್ಥೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ). ಮಂಗಳೂರು, ನಂತರ ನಾಟಕರಂಗ, ದೈವನರ್ತಕರು ಹಾಗೂ ಇತರ ಕಲಾವಿದರ ಪಾಲಿಗೆ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಟ್ಲ ಫೌಂಡೇಶನ್ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 43 ಘಟಕಗಳನ್ನು ಹೊಂದಿದೆ.



