ಕಡಬ ಟೈಮ್ಸ್, ಸುಳ್ಯ: ಸುಳ್ಯ ತಾಲೂಕಿನ ಅರಂತೋಡು ಗ್ರಾ.ಪಂ ಗೆ ಒಳಪಡುವ ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿರುವ ತಮಿಳು ಕಾಲನಿಯಲ್ಲಿ ಕೊರೋನ ಸ್ಫೋಟಗೊಂಡಿದ್ದು, ನಿನ್ನೆ ಒಟ್ಟು ೩೦ ಮಂದಿಗೆ ಕೊರೋನ ಸೋಂಕು ಧೃಢ ಪಟ್ಟಿದೆ. ಒಟ್ಟು ೫೫ ಮಂದಿಗೆ ಸೋಂಕು ಕಂಡುಬಂದಿದೆ.
ಕೆಲದಿನಗಳ ಹಿಂದೆ ಇಲ್ಲಿನ ಕೊರೋನ ಸೋಂಕಿತರೊಬ್ಬರು ಮೃತಪಟ್ಟಿದ್ದರು. ಜೂ.4ರಂದು ಮತ್ತೊಬ್ಬರು ಮೃತರಾಗಿರುವುದರಿಂದ ಕಾಲನಿ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೊರೋನ ಸೋಂಕಿತರೆಲ್ಲರನ್ನು ಸುಳ್ಯದ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಲಾಗಿದೆ.ಅಡ್ಯಡ್ಕ ತಮಿಳು ಕಾಲನಿಯ ಕುಟುಂಬವೊಂದರ ಕೆಲವು ಸದಸ್ಯರು ಎಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ಹೋಗಿ ಮೇ ತಿಂಗಳಲ್ಲಿ ಹಿಂತಿರುಗಿದ್ದರು. ಅವರಲ್ಲಿ ಒಂದಿಬ್ಬರಿಗೆ ಜ್ವರ ಬಂದುದರಿಂದ ಪರೀಕ್ಷೆಗೊಳಪಡಿಸಿದಾಗ ಬಹುತೇಕರಿಗೆ ಕೊರೋನ ಪಾಸಿಟಿವ್ ಬಂದಿತ್ತು.
ಆರೋಗ್ಯ ಇಲಾಖೆಯ ಅಧಿಕಾರಿಗಳು ತಮಿಳು ಕಾಲನಿಗೆ ಭೇಟಿ ನೀಡಿ ಪರಿಶೀಲಿಸಿ , ಎಲ್ಲ ಸೋಂಕಿತರನ್ನು ಸುಳ್ಯದ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಲು ಸೂಚನೆ ನೀಡಿದರು. ಕಾಲನಿಯನ್ನು ಪೂರ್ಣ ಸೀಲ್ ಡೌನ್ ಮಾಡಲು ನಿರ್ಧರಿಸಿದರು. ಬಳಿಕ ಪುತ್ತೂರು ಎ.ಸಿ. ಡಾ. ಯತೀಶ್ ಉಳ್ಳಾಲ್ ರವರು ಮತ್ತು ತಹಶೀಲ್ದಾರ್ ಕು.ಅನಿತಾಲಕ್ಷ್ಮಿಯವರು ಅಡ್ಯಡ್ಕ ಕಾಲನಿಗೆ ಭೇಟಿ ನೀಡಿ ಸೋಂಕಿತರನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಇನ್ನರ್ವೀಲ್ ಕ್ಲಬ್ನವರು ಕಾಲನಿಯನ್ನು ಸ್ಯಾನಿಟೈಸ್ ಮಾಡಿದ್ದಾರೆ.
ಅಡ್ಯಡ್ಕ ತಮಿಳು ಕಾಲನಿಯಲ್ಲಿ ಒಟ್ಟು ೮೪ ಮನೆಗಳಿದ್ದು ಅವುಗಳಲ್ಲಿ 71 ಮನೆಗಳಲ್ಲಿ ತಮಿಳು ಕಾರ್ಮಿಕರು ವಾಸವಾಗಿದ್ದರು. ಅವರಲ್ಲಿ 6 ಮನೆಗಳವರು ಬೇರೆ ಬೇರೆ ಕಾರಣಗಳಿಗಾಗಿ ಲಾಕ್ಡೌನ್ ಗಿಂತ ಮೊದಲು ಬೇರೆ ಊರಿಗೆ ಹೋಗಿದ್ದು, ಅವರಿಗೆ ಹಿಂತಿರುಗಲು ಸಾಧ್ಯವಾಗಿಲ್ಲ. ಉಳಿದ 65 ಮನೆಗಳವರಲ್ಲಿ ೩ ಮನೆಗಳ ಎಲ್ಲರಿಗೂ ಕೊರೋನ ಪಾಸಿಟಿವ್ ಬಂದಿರುವುದರಿಂದ ಅವರೆಲ್ಲರನ್ನು ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. ಇನ್ನುಳಿದ ೬೨ ಮನೆಗಳವರಲ್ಲಿ ಪಾಸಿಟಿವ್ ಬಂದವರನ್ನು ಹೊರತು ಪಡಿಸಿ ಇತರರು ಕಾಲನಿಯ ತಮ್ಮ ಮನೆಗಳಲ್ಲಿದ್ದಾರೆ. ೪೪ ಮಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿದ್ದಾರೆ. ಇನ್ನು ಸುಮಾರು 5೦ ಮಂದಿ ಪರೀಕ್ಷೆಗೆ ಬಾಕಿ ಇದ್ದಾರೆ.
ಇಡೀ ಕಾಲನಿಯನ್ನು ಟೇಪ್ ಕಟ್ಟಿ ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಿ ಓರ್ವ ಪೋಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿದೆ. ಕಾಲನಿ ನಿವಾಸಿಗಳನ್ನು ನಾಲ್ಕು ವಿಭಾಗವನ್ನಾಗಿ ಮಾಡಿ ತಲಾ ನಾಲ್ವರು ಯುವಕರಿಗೆ ಅವರನ್ನು ನೋಡಿಕೊಳ್ಳುವ, ಹಾಗೂ ಅವರುಗಳಿಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ತಲುಪಿಸುವ ಜವಾಬ್ದಾರಿ ನೀಡಲಾಗಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಶಂಕರಲಿಂಗಂ ರವರಿಗೆ ಈ ಎಲ್ಲ ಸೇವಾ ಕಾರ್ಯಗಳ ಮುಖ್ಯ ಜವಾಬ್ದಾರಿ ನೀಡಲಾಗಿದೆ.


