ಕಡಬ ಟೈಮ್ಸ್, ಕೋಡಿಂಬಾಳ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸಮೀಪದ ಸೇತುವೆ ಸಮೀಪದ ರಸ್ತೆ ತಿರುವಿನಲ್ಲೇ ದಿಢೀರ್ ಕೊಳವೆ ಬಾವಿ ಕೊರೆದಿದ್ದು ಉದ್ದೇಶಿತ ಜಾಗದಲ್ಲಿ ಕೊಳವೆ ಬಾವಿ ನಿರ್ಮಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಡಬ ಪ.ಪಂ ವ್ಯಾಪ್ತಿಯ ದಾಸರಗುಡ್ಡೆ ಎಂಬಲ್ಲಿ ನೀರಿನ ಟ್ಯಾಂಕ್ ಇದ್ದು ಬೇಸಿಗೆಯಲ್ಲಿ ಸಮರ್ಪಕ ನೀರು ಲಭ್ಯವಾದ ಹಿನ್ನೆಲೆ ಇನ್ನೊಂದು ಕೊಳವೆ ಬಾವಿ ನಿರ್ಮಿಸುವ ಬಗ್ಗೆ ಅಂದಿನ ಗ್ರಾ.ಪಂ ಅಸ್ಥಿತ್ವದಲ್ಲಿದ್ದ ಸಂದರ್ಭ ನಿರ್ಣಯಿಸಲಾಗಿತ್ತು. ಹೀಗಾಗಿ ದಲಿತ ಕಾಲೋನಿ ನಿವಾಸಿಗಳ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ನೀರಿನ ಟ್ಯಾಂಕ್ ಸಮೀಪ ದಾಸರಗುಡ್ಡೆಯಲ್ಲಿ ಕೊಳವೆ ಬಾವಿ ನಿರ್ಮಿಸಬೇಕಿತ್ತು. ಆದರೆ ಅಂದಾಜು 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಕೊರೆದ ಈ ಕೊಳವೆ ಬಾವಿ ಒಂದು ಕಿ.ಮೀ ದೂರದಲ್ಲಿ ಕೊರೆದಿರುವುದು ಅನುಮಾನಕ್ಕೆ ಕಾರಣವಾಗಿದೆ .ಅವೈಜ್ಞಾನಿಕವಾಗಿ ಅಪಾಯಕಾರಿ ರಸ್ತೆ ತಿರುವಿನಲ್ಲೇ ಈ ಕೊಳವೆಬಾವಿ ಕೊರೆಸಲಾಗಿದೆ ಎಂಬ ಆರೋಪವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ರಾಜ್ಯ ಹೆದ್ದಾರಿ ಬದಿಯಲ್ಲಿ ಗರಿಷ್ಠ ಅಂದರೂ ಒಂದು ಮೀಟರ್ ದೂರವೂ ಈ ಕೊಳವೆಬಾವಿಗೆ ಇಲ್ಲ.ಮಾತ್ರವಲ್ಲದೆ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದ ಅಪಾಯಕಾರಿ ತಿರುವಿನಲ್ಲೇ ಈ ಕೊಳವೆಬಾವಿ ಇದೆ. ಇಲ್ಲೇ ಪಕ್ಕದಲ್ಲಿ ಈಗಾಗಲೇ ಸ್ಥಿತಿಗೆ ಬಂದ ಸೇತುವೆಯೂ ಇದೆ. ಕೊರೆದ ಕೊಳವೆ ಬಾವಿಯಲ್ಲಿ ನಿರೀಕ್ಷಿತ ನೀರೂ ಕೂಡ ಲಭ್ಯವಾಗಿಲ್ಲ.
ಈ ಬಗ್ಗೆ ತಾ.ಪಂ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಅವರು ಮಾತನಾಡಿ , ನಮ್ಮ ಅಧಿಕಾರ ಅವಧಿಯಲ್ಲಿ ದಾಸರಗುಡ್ಡೆ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಗಾಗಿ ಅನುದಾನ ಮೀಸಲಿಟ್ಟು ಕೊಳವೆಬಾವಿ ಕೊರೆಸುವ ಬಗ್ಗೆ ನಿರ್ಣಯಿಸಲಾಗಿತ್ತು. ಆದರೆ ಇದೀಗ ಸ್ಥಳೀಯ ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ನಮಗೆ ಮಾಹಿತಿ ನೀಡದೇ ,ಸ್ಥಳೀಯರಿಗೂ ತಿಳಿಸದೆ ಅಪಾಯಕಾರಿ ತಿರುವಿನಲ್ಲಿ ಹಾಗೂ ನೀರಿನ ಟ್ಯಾಂಕ್ ಇರುವ ಕಡೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ಇದರಿಂದಾಗಿ ಅಪಾಯ ಉಂಟಾಗುವ ಸಾಧ್ಯತೆ ಇರುವುದು ಮಾತ್ರವಲ್ಲದೆ ಇನ್ನು ಪೈಪ್ ಲೈನ್ ಅಳವಡಿಸಲು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ ಇದು ಪ. ಪಂ ಆಡಳಿತದ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದರಿಂದಾಗುವ ಅನಾಹುತಗಳಿಗೆ ಹಾಗೂ ನಷ್ಟಗಳಿಗೆ ಪಟ್ಟಣ ಪಂಚಾಯತ್ ನೇರ ಹೊಣೆ ಎಂದು ಹೇಳಿದ್ದಾರೆ.


