ಕಡಬ ಟೈಮ್ಸ್, ಕೊಂಬಾರು: ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತನ್ನ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ಗ್ರಾಮಸ್ಥರೊಬ್ಬರು ಸಲ್ಲಿಸಿದ ಅಹವಾಲಿಗೆ ಅಧಿಕಾರಿಗಳಿಂದ ಸ್ಪಂದನೆ ದೊರಕಿದೆ.
ಕೊಂಬಾರಿನ ಶಿವರಾಮ ಅವರು ತನ್ನ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ಮತ್ತು ಹಲವು ಸಮಯದಿಂದ ಬೇಡಿಕೆ ಸಲ್ಲಿಸಿದ್ದರೂ ಪ್ರಯೋಜನ ವಾಗಿಲ್ಲ ಎಂದು ಕೊಂಬಾರಿನಲ್ಲಿ ಜರಗಿದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ದೂರು ನೀಡಿದ್ದರು. ಕೂಡಲೇ ಈ ಬಗ್ಗೆ ಸ್ಪಂದಿಸಿದ ಕಡಬ ಮೆಸ್ಕಾಂ ಎಇಇ, ಜನಪರ ಕಾಳಜಿಯ ಅಧಿಕಾರಿ ಸಜಿಕುಮಾರ್ ಸರ್ ಅವರು ಸಮಸ್ಯೆಯನ್ನು ಬಗೆಹರಿಸಿಕೊಟ್ಟಿದ್ದಾರೆ.
ವಿದ್ಯುತ್ ತಂತಿ ಎಳೆಯುವಲ್ಲಿ ಜಾಗದ ತಕರಾರು ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ಇವರ ಮನೆಗೆ ವಿದ್ಯುತ್ ಸಂಪರ್ಕ ಸಾಧ್ಯಾಗಿರಲಿಲ್ಲ. ಸಮಸ್ಯೆ ಬಗೆಹರಿಯಲು ವಿದ್ಯುತ್ ಲೈನ್ ಹಾದು ಹೋಗುವ ಜಮೀನಿನ ಮಾಲಕರುಗಳು ಮುಕ್ತ ಮನಸ್ಸಿನಿಂದ ಸಹಕರಿಸಿದ ಕಾರಣದಿಂದಾಗಿ ಸಮಸ್ಯೆ ಬಗೆಹರಿದಿದೆ. ಮೆಸ್ಕಾಂ ವತಿಯಿಂದ 88 ಸಾವಿರ ರೂ. ವೆಚ್ಚದಲ್ಲಿ ಒಟ್ಟು 6 ವಿದ್ಯುತ್ ಕಂಬಗಳನ್ನು ನೆಟ್ಟು ವಿದ್ಯುತ್ ಮಾರ್ಗ ಅಳವಡಿಸಲಾಗಿದೆ.
ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ಕೃತಜ್ಞತೆ ಸಲ್ಲಿಸಿದ್ದಾರೆ.


